ಭಾರತದಲ್ಲಿ ಗಣಿತ, ಭೂತ, ವರ್ತಮಾನ ಹಾಗೂ ಭವಿಷ್ಯ - ಗಿರೀಶ್ ಹೆಚ್.ಪಿ.



               ಭಾರತೀಯ ಗಣಿತವು ವೇದಗಳ ಕಾಲದಿಂದ ಪ್ರಚಲಿತದಲ್ಲಿದ್ದು ಭಾರತೀಯ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತೀಯ ಗಣಿತಜ್ಞರುಗಳು ಇಡೀ ಪ್ರಪಂಚವೇ ಭಾರತವನ್ನು ಗೌರವಿಸುವಂತಹ
ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಶೂನ್ಯ ಹಾಗೂ ದಶಮಾಂಶ ಪದ್ಧತಿ. ಐನ್‌ಸ್ಟೀನ್ ಎಣಿಕೆಯನ್ನು ಕಲಿಸಿದ ಭಾರತೀಯರಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಹೇಳಿದ್ದಾನೆ. ಹಾಗೆಯೇ ಕಜೋರಿ ಎಂಬ ಇತಿಹಾಸಕಾರನೂ ಶೂನ್ಯ ಆವಿಷ್ಕಾರವನ್ನು ಪ್ರಶಂಶಿಸಿದ್ದಾನೆ.
            ಭಾರತೀಯ ಗಣಿತದ ಮುಕುಟದ ಮಣಿಗಳೆಂದೇ ಕರೆಯಬಹುದಾದ ಅನೇಕ ಭಾರತೀಯ ಗಣಿತಜ್ಞರುಗಳಿದ್ದಾರೆ. ಅವರಲ್ಲಿ ಪ್ರಮುಖನಾದ ಆರ್ಯಭಟನ ಸಾಧನೆ ಅಪಾರ. ಆತ ತನ್ನ ಆರ್ಯಭಟೀಯಂ ಕೃತಿಯಲ್ಲಿ ವೃತ್ತದ ವ್ಯಾಸ ಹಾಗೂ ಸುತ್ತಳತೆಯ ಪ್ರಮಾಣದ ಸಂಕೇತವಾದ '?' ಬೆಲೆಯನ್ನು ಸರಿಸುಮಾರು 3.14 ಎಂದು ತಿಳಿಸಿದ್ದನು. ಅಲ್ಲದೇ ತ್ರಿಕೋನಮಿತಿ (Trigonometry) ಅನಿರ್ದಿಷ್ಟ ಸಮೀಕರಣಗಳನ್ನು ಬಿಡಿಸುವ 'ಕುಟ್ಟುಕ' ವಿಧಾನಗಳು ಆತನ ಹಿರಿಮೆಯಾಗಿತ್ತು. ಮತ್ತೋರ್ವನಾದ ಬ್ರಹ್ಮಗುಪ್ತನು ಖಗೋಳತಜ್ಞನಾಗಿದ್ದು ವರ್ಗಸಮೀಕರಣಗಳನ್ನು ಬಿಡಿಸುವ ವಿಧಾನಗಳನ್ನು ನೀಡುವ ಮೂಲಕ ಭಾರತೀಯ ಗಣಿತಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದನು.
            ಅಲ್ಲದೇ ಕರ್ನಾಟಕದವರೇ ಆದ ಭಾಸ್ಕರ-2 ಯುರೋಪಿಯನ್ನರೂ ಬಿಡಿಸಲಾಗದ x2-61y2=1 ಸಮೀಕರಣವನ್ನು 'ಚಕ್ರವಾಲ ಪದ್ಧತಿ' ಮೂಲಕ ಬಿಡಿಸಿದ್ದು ಹೆಮ್ಮೆಯ ವಿಷಯವೇ ಸರಿ. ಇವನು 'ಲೀಲಾವತಿ ಗಣಿತ' ಗ್ರಂಥದ ಮೂಲಕ ಪ್ರಖ್ಯಾತನಾದನು. ಇನ್ನಿತರ ಗಣಿತಜ್ಞರಲ್ಲಿ ವರಹಮಿಹಿರನು ಜ್ಯೋತಿಷ್ಯ, ಖಗೋಳಗಳ ಬಗ್ಗೆ ಬೃಹತ್ ಸಂಹಿತೆ ಗ್ರಂಥದಲ್ಲಿ ತಿಳಿಸಿದರೆ, ಮಹಾವೀರನು ಸಮಸ್ಯೆಗಳನ್ನು ಆಸಕ್ತಿಕರವಾಗಿ, ಕಾವ್ಯ ರೂಪದಲ್ಲಿ ಬಿಡಿಸಿದನು.
ಇವರುಗಳೇ ಅಲ್ಲದೇ ಮಹಾವೀರಾಚಾರ್ಯ, ಭಾಸ್ಕರ-1 ರಂತಹ ಭಾರತೀಯ ಗಣಿತಜ್ಞರು ಪೈಪೋಟಿಗೆ ಬಿದ್ದವರಂತೆ ಭಾರತೀಯ ಗಣಿತ ಕ್ರಾಂತಿಗೆ ನಾಂದಿ ಹಾಡಿದರು. ಹೀಗೆ ಆಗಿನ ಕಾಲದಲ್ಲೇ ಭಾರತೀಯರು ವಾಸ್ತುಶಿಲ್ಪ, ಜಲಯಂತ್ರ, ವಾಯುಯಂತ್ರ ನಿರ್ಮಾಣಗಳಂತಹ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದುದು ಹೆಮ್ಮೆಯ ಪ್ರತೀಕವೇ ಅಲ್ವಾ . . .? ಹಾಗಾಗಿ ವಿವೇಕಾನಂದರೂ ನಮ್ಮ ಗಣಿತವನ್ನು ಕೊಂಡಾಡಿರುವುದು ಅತಿಶಯೋಕ್ತಿಯೇನಲ್ಲ.
ಇದು ಭೂತಕಾಲದ ಗಣಿತದ ವಿಷಯವಾದರೆ ಪ್ರಸ್ತುತದಲ್ಲಿಯೂ ಭಾರತೀಯ ಗಣಿತ ಅತೀ ಪ್ರಾಮುಖ್ಯತೆ ಹೊಂದಿದೆ. ಶ್ರೀನಿವಾಸ ರಾಮಾನುಜನ್‌ರಂತಹ ಮಹಾನ್ ಗಣಿತಜ್ಞರು ಗಣಿತದ ವೈಭವವನ್ನು ಹೆಚ್ಚಿಸಿದ್ದಾರೆ. ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿಯೇ ಸಂಖ್ಯಾಸಿದ್ಧಾಂತ, ಅತಿಪರ-ರೇಖಾಗಣಿತ, ವಿನೋದಗಣಿತದಲ್ಲಿ ಮಾಯಾಚೌಕಗಳ ಬಗ್ಗೆ ತಿಳಿಸಿಕೊಟ್ಟರು. ಇಂದಿನ ದಿನಗಳಲ್ಲಿ ಗಣಿತ ವ್ಯಾಪಕವಾಗಿ ಬಳಕೆ ಆಗುತ್ತಿದ್ದು ಅಳತೆ ಮಾನಗಳು, ಸಮಯ, ದಿನ, ವಾರ, ಮಾಸ, ವರ್ಷ ಮುಂತಾದವುಗಳಲ್ಲಿ ಗಣಿತ ಹಾಸು ಹೊಕ್ಕಾಗಿದೆ. ಅಲ್ಲದೇ ಮಾಯಾಜಾಲದಂತಿರುವ ಇಂಟರ್‌ನೆಟ್, ಸಾರಿಗೆ-ಸಂಪರ್ಕ ವಾಸ್ತುಶಿಲ್ಪ, ಕೈಗಾರಿಕೆ, ವಾಹನ ತಯಾರಿಕೆ ಮುಂತಾದ ಕ್ಷೇತ್ರಗಳು ಪ್ರಗತಿ ಕಾಣಲು ಗಣಿತವೇ ಭಾರತಕ್ಕೆ ವರದಾನ ಆಗಿದೆ.
        ಇಂದಿನ ದಿನಗಳಲ್ಲಿ ಬಾಲ್ಯದಿಂದಲೇ ಗಣಿತ ಅನಿವಾರ್ಯ ಆಗಿದ್ದು ಈ ರೀತಿ ಗಣಿತ ಕಲಿತವರು ತರ್ಕ ವ್ಯವಹಾರ, ಸಂಶೋಧನೆಗಳಲ್ಲಿ ಸಾಧನೆ ಮಾಡಬಲ್ಲರು. ಈಗೀಗ ಭಾರತದಲ್ಲಿ ಗಣಿತದ ಸಭಿರುಚಿ ಮೂಡಿಸಲು NTSE ಹಾಗೂ NMMS ಗಳಂತಹ ಪರೀಕ್ಷೆಗಳನ್ನು, ಗಣಿತ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತಿದೆ. ಈಗಿನ ದಿನಮಾನಗಳಲ್ಲಿ ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದ ಶಂಕುತಲಾದೇವಿ ಭಾರತದ ಹೆಮ್ಮೆಯ ಗರಿ ಎಂದರೆ ಅತಿಶಯೋಕ್ತಿ ಅಲ್ಲ . ಇನ್ನು ಭಾರತೀಯ ಗಣಿತದ ಭವಿಷ್ಯಕ್ಕೆ ಬಂದರೆ ಮುಂದೆ ಗಣಿತ ಮತ್ತಷ್ಟು ಪ್ರಭಲವಾಗಬೇಕಿದೆ. ಕಾರಣ ಗಣಿತದ ಸಹಾಯದಿಂದ ಅಮೇರಿಕ, ಇಂಗ್ಲೆಂಡ್, ಜಪಾನ್ ಹಾಗೂ ಇನ್ನಿತರ ಯೂರೋಪಿಯನ್ ರಾಷ್ಟ್ರಗಳು ಮುಂದುವರಿದ ರಾಷ್ಟ್ರಗಳಾಗಿವೆ.   Mathematics is the king of all subjects and Queen of all sciences” ಎಂಬ ಉಕ್ತಿಯಂತೆ ಗಣಿತದ ಅಭಿವೃದ್ಧಿ ಉಳಿದ ವಿಷಯಗಳಿಗೆ ಪೂರಕ ಆಗಲಿದೆ. ಭಾರತವು ತನಗಿರುವ ಬಲ, ಅವಕಾಶಗಳನ್ನು ಬಳಸಿಕೊಂಡು ಅಡ್ಡಿ - ಆತಂಕಗಳನ್ನು ಮೆಟ್ಟಿ ನಿಲ್ಲಬೇಕಿದೆ. ಭಾರತವು ಗಣಿತೀಯವಾಗಿ ಅಭಿವೃದ್ಧಿ ಹೊಂದಲು ಕೆಳಗಿನ ಅಂಶಗಳು ಸಹಕಾರಿ ಆಗಬಲ್ಲದು ಎಂಬುದು ನನ್ನ ಅನಿಸಿಕೆ.
  • ಪ್ರಾಚೀನ ವೇದಗಣಿತಕ್ಕೆ ಪುನಃ ಪ್ರಾಶಸ್ತ್ಯ ದೊರೆಯಬೇಕು.
  • ಗಣಿತ ಕಬ್ಬಿಣದ ಕಡಲೆ ಎಂಬ ಭಾವನೆ ಹೋಗಲಾಡಿಸಬೇಕು.
  • ಗಣಿತವು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ಮುಂತಾದವುಗಳ ಬುನಾದಿ ಎಂದು ಅರಿತು ಅದರ ಅಧ್ಯಯನ ಕೇಂದ್ರಗಳನ್ನು ತೆರೆಯಬೇಕು.
  • ಗಣಿತದಲ್ಲಿ ಸಾಧನೆ ಮಾಡಿದವರಿಗೆ ಮೆರಿಟ್ ಸ್ಕಾಲರ್‌ಶಿಪ್ ನೀಡಬೇಕು.
  • ಉತ್ತಮ ಗಣಿತ ಶಿಕ್ಷಕರು ಲಭ್ಯವಾಗಬೇಕು.
  • ಮುಖ್ಯವಾಗಿ ಪ್ರತಿಭಾ ಪಲಾಯನ ತಪ್ಪಬೇಕು. ಅಂದರೆ ನಮ್ಮ ಗಣಿತದ ಪ್ರತಿಭೆಗಳು ಹೊರದೇಶಗಳ ಪಾಲಾಗದಂತೆ ಅವರಿಗೆ ನಮ್ಮಲ್ಲಿಯೇ ಉತ್ತಮ ಸೌಕರ್ಯಗಳನ್ನು ನೀಡಬೇಕು.

ಒಟ್ಟಾರೆಯಾಗಿ ಬಾಹ್ಯಾಕಾಶ ಶೋಧನೆ ಯಶ್ವಸ್ವಿಯಾಗಿ ಮುಂದುವರಿಯುತ್ತಿರುವ, ಮಾನವನ ಮೇಧಾಶಕ್ತಿಯಿಂದ ರಚಿತ ಯಂತ್ರಗಳು ಜಗತ್ತನ್ನೇ ಆಳುತ್ತಿರುವ ಸಂದರ್ಭದಲ್ಲಿ ಭಾರತದ ಮುಂದಿನ ಭವಿಷ್ಯ ಉಜ್ವಲವಾಗಿ, ಮುಂದುವರೆದ ರಾಷ್ಟ್ರಗಳನ್ನು ಮೆಟ್ಟಿ ನಿಲ್ಲಬೇಕಾದರೆ ಅದು ಭವಿಷ್ಯದಲ್ಲಿ ಗಣಿತದ ಪ್ರಗತಿಯಿಂದ ಮಾತ್ರ ಸಾಧ್ಯ.