ಇಸವಿ 1900. ಮೂರನೇ ಫಾರ್ಮ್ನ
ಬೋಧನಾ ಕೊಠಡಿ. ಭಾಗಾಕಾರದ ಕುರಿತು ಬೋಧನೆ ನಡೆಯುತ್ತಿತ್ತು. ಉಪಾಧ್ಯಾಯರು ನಿರರ್ಗಳವಾಗಿ
ಭಾಗಾಕಾರ ಎಂದರೇನು ಎಂಬುದಾಗಿ ವಿವರಿಸುತ್ತಿದ್ದರು. ಅವರ ಬೋಧನಾ ಸರಣಿ
ಹೀಗೆ ಮುಂದುವರಿದಿತ್ತು: 10
ಹಣ್ಣುಗಳನ್ನು 10 ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೂ ಒಂದು
ಹಣ್ಣು ದೊರೆಯುತ್ತದೆ. 10 ಹಣ್ಣುಗಳನ್ನು 5
ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೆ 2 ಹಣ್ಣು
ದೊರೆಯುತ್ತವೆ. 100 ಹಣ್ಣುಗಳನ್ನು 100
ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೂ ಒಂದು ಹಣ್ಣು ದೊರೆಯುತ್ತದೆ. ಭಾಗಾಕಾರವು ಒಂದು ಸಂಖ್ಯೆಯು
ಮತ್ತೊಂದು ಸಂಖ್ಯೆಯ ಎಷ್ಟರಷ್ಟಿದೆ ಎಂದು ತಿಳಿಸುತ್ತದೆ. ಆದ್ದರಿಂದ ಯಾವುದೇ ಸಂಖ್ಯೆಯನ್ನು ಅದೇ
ಸಂಖ್ಯೆಯಿಂದ ಭಾಗಿಸಿದಾಗ ದೊರೆಯುವ ಸಂಖ್ಯೆ 1. ಹೀಗೆ
ಉಪಾಧ್ಯಾಯರು ಹೇಳಿದ್ದೇ ತಡ, 13ರ ಪ್ರಾಯದ ಅಣುಗ ತಟ್ಟನೆ ಪ್ರಶ್ನಿಸಿದ : ಹಾಗಾದರೆ ಸೊನ್ನೆಯಲ್ಲಿ ಸೊನ್ನೆ ಒಂದು
ಬಾರಿ ಇದೆಯೇ ಸರ್?
(=ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಒಂದು ದೊರೆಯುತ್ತದೆಯೇ). ಉಪಾಧ್ಯಾಯರು
ನಿರುತ್ತರರಾದರು.
ಹೀಗೆ ಪ್ರಶ್ನಿಸಿದ ಆ ಹುಡುಗನೇ ಜಗತ್ಪ್ರಸಿದ್ಧ ಗಣಿತ
ಮೇಧಾವಿ ಶ್ರೀನಿವಾಸ ರಾಮಾನುಜನ್. ಭಾರತ ಸರ್ಕಾರ ಅವರ 125ನೇ ಜನ್ಮದಿನದ ಸವಿ
ನೆನಪಿಗಾಗಿ 2012ನ್ನು ಗಣಿತ ವರ್ಷವನ್ನಾಗಿ ಘೋಷಿಸಿತು.
ಅಂತೆಯೇ ಶ್ರೀನಿವಾಸ ರಾಮಾನುಜನ್ರವರ ಹುಟ್ಟಿದ ದಿನವಾದ ಡಿಸೆಂಬರ್ 22ನ್ನು
ಪ್ರತೀ ವರ್ಷ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಇದು ಡಿಸೆಂಬರ್ ಮಾಸ. 22ನೇ
ತಾರೀಕು ಬಂದೇ ಬರುತ್ತದೆ. ಅಂದು ಮಾತ್ರ ರಾಮಾನುಜನ್ರ ಗಣಿತ ಸಾಧನೆಗಳನ್ನು ನೆನೆದು ಮರೆತು
ಬಿಡುತ್ತೇವೆ. ಇದೆಲ್ಲಕ್ಕೂ ಮಿಗಿಲಾಗಿ ಶಿಕ್ಷಕರಾದ ನಾವು ಶಾಲೆಗಳಲ್ಲಿ ನಮ್ಮ ಗುರುತರ
ಜವಬ್ದಾರಿಯೊಂದನ್ನು ಮರೆತಿದ್ದೇವೆ. ಅದೇ, ಗಣಿತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
ಶ್ರೀನಿವಾಸ ರಾಮಾನುಜನ್ರವರ ಪ್ರತಿಭೆಯನ್ನು ಗುರುತಿಸುವಲ್ಲಿ ಆ ಕಾಲದಲ್ಲಿ ಆದ ಲೋಪ ಇಂದು
ಮರುಕಳಿಸದಿರಲಿ. ಪ್ರತಿಭೆ ಎಲ್ಲಿದ್ದರೂ ಅದು ಬೆಳಗುತ್ತದೆ ಎಂಬುದು ಸತ್ಯವಾದರೂ ಅದನ್ನು ಸೂಕ್ತ
ಸಂದರ್ಭದಲ್ಲಿ ಪೋಷಿಸಿ, ಪ್ರೋತ್ಸಾಹಿಸಬೇಕು. 'ರಾಮಾನುಜನ್ ಬಾಳಿದರಿಲ್ಲಿ' ಎಂಬ ತಮ್ಮ
ಪುಸ್ತಕದಲ್ಲಿ ಜಿ ಟಿ ನಾರಾಯಣರಾವ್ ರವರು, ರಾಮಾನುಜನ್ರ ಬಾಲಮಿತ್ರ ಎಂ. ಅನಂತರಾಮನ್ರವರ
ಮಾತುಗಳನ್ನು ಹೀಗೆ ಉದ್ಧರಿಸಿದ್ದಾರೆ ಆ ದಿನಗಳಲ್ಲಿ ಅವರ (ರಾಮಾನುಜನ್ರವರ) ಅಸಾಮಾನ್ಯ
ಪ್ರತಿಭೆಯನ್ನು ಗುರುಗಳು ಯಾರೂ ಗುರುತಿಸಲಿಲ್ಲ. ಟಿ.ಕೆ. ವೆಂಕಟರಾಮ ಅಯ್ಯರ್ ತನ್ನನ್ನು ಗೇಲಿ
ಮಾಡಿದರೆಂದೂ, ಪಿ.ವಿ.
ಶೇಷು ಅಯ್ಯರ್ ತನ್ನ ಬಗ್ಗೆ ಉದಾಸೀನರಾಗಿದ್ದರೆಂದೂ ರಾಮಾನುಜನ್ ಹೇಳಿದ್ದರು.
ಕೆ.ಎಸ್.ಪತ್ರಾಚಾರ್ಯರು ಮಾತ್ರ ಕೊಂಚ ಆಸಕ್ತಿವಹಿಸಿದ್ದರಂತೆ. ಆದರೆ ಮುಂದೊಂದು ದಿನ ಈ
ಪ್ರಾಧ್ಯಾಪಕರೆಲ್ಲರೂ ಇವರನ್ನು ತಮ್ಮ ಶಿಷ್ಯನೆಂದೂ ತಾವು ಇವರ ಪ್ರತಿಭೆಯನ್ನು ಆರಂಭದ
ದಿನಗಳಲ್ಲಿಯೇ ಗುರುತಿಸಿದ್ದೆವೆಂದೂ ಹೇಳಿಕೊಂಡಿರುವರು.
ಈ ಮಾತುಗಳಿಂದ
ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿಯಬೇಕಾಗಿದೆ. ಪ್ರತಿಭೆಗಳನ್ನು ಎಳವೆಯಲ್ಲಿಯೇ ಗುರುತಿಸಿ
ಪ್ರೋತ್ಸಾಹಿಸುವ ಕಾರ್ಯ ನಮ್ಮದಾಗಬೇಕಾಗಿದೆ. ಅನೇಕ ಶಿಕ್ಷಕರು ಆ ಕಾರ್ಯದಲ್ಲಿ ತೊಡಗಿರುವರೆಂಬುದು
ಸಂತಸದ ಸಂಗತಿ.
ರಾಮಾನುಜನ್ರವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ
ದಿನವನ್ನಾಗಿ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸೃಜನಶೀಲತೆ ಪರೀಕ್ಷಿಸುವ ಸ್ಪರ್ಧೆಗಳನ್ನೋ, ಪರೀಕ್ಷೆಗಳನ್ನೋ
ನಡೆಸಿ ಪ್ರಶಸ್ತಿ ಬಹುಮಾನಗಳನ್ನು ವಿತರಿಸುವ ಕಾರ್ಯವೆಸಗುತ್ತೇವೆ. ಅದರೊಂದಿಗೆ ಆ ಸಂದರ್ಭದಲ್ಲಿ
ನಾವು ಗುರುತಿಸುವ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಬ್ದಾರಿಯನ್ನೂ ನಾವು
ಹೊರಬೇಕಿದೆ. ಆ ಮೂಲಕ ಭವಿತವ್ಯದ ಗಣಿತ ಪ್ರತಿಭೆಗಳು ಭಾರತದ ಕೀರ್ತಿ ಬೆಳಗುವಂತೆ ಸಹಕರಿಸಬೇಕಿದೆ.
ಪ್ರತಿಯೊಬ್ಬರಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಗುರುತಿಸುವ ದೃಷ್ಟಿಕೋನ ಪ್ರತಿ
ಶಿಕ್ಷಕರಲ್ಲಿ, ಪ್ರೋತ್ಸಾಹಿಸುವ
ಗುಣ ತಂದೆತಾಯಿಯರಲ್ಲಿ ಇದ್ದಾಗ ಮಾತ್ರ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಗೆಲುವುಗಳನ್ನು
ರೂಢಿಸಿಕೊಳ್ಳುತ್ತಾರೆ. ಅಂದು ಶ್ರೀನಿವಾಸ ರಾಮಾನುಜನ್ರವರು ಅನುಭವಿಸಿದ ಸಾಮಾಜಿಕ ಕೊರತೆ
(ಪ್ರತಿಭೆ ಗುರುತಿಸದಿರುವುದು) ಇಂದು ತಲೆದೋರದಂತೆ ದೂರವಾಗಿಸಲು ಅನೇಕ ಮಾಧ್ಯಮಗಳಿವೆ. ಆದರೆ
ಶಿಕ್ಷಕರ ಜವಬ್ದಾರಿಯೇ ಗುರುತರವಾದದ್ದು. ಬನ್ನಿ ಪ್ರತಿಭೆಗಳನ್ನು ಬೆಳಗಿಸೋಣ.
(ಪೋಟೋ ಕೃಪೆ : ಅಂತರ್ಜಾಲ)